ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.
"ಎಲ್ಲರೂ ದುಡಿಯಬೇಕು"ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .
ಒಂದೂರಿನ ಹೊಲದಲ್ಲಿ ಮೊದಲಪ್ಪ , ಕೆಸರಪ್ಪ ,ಬೊಗಳಪ್ಪ ಮತ್ತು ಮೆಲುಕಪ್ಪ ಎಂಬ ನಾಲ್ಕು ಜನರಿದ್ದರು. ಮೊದಲಪ್ಪಎಲ್ಲರಿಗಿಂತ ಮುಂಚೆಯೇ ಏಳುತ್ತಿದ್ದ . ಸದಾ ಚಟುವಟಿಕೆಯ ಬುದ್ಧಿವಂತ , ಕೆಸರಪ್ಪ ತಾನೂ ಕೆಸರಿನಲ್ಲಿದ್ದು , ಬೇರೆಯವರತ್ತ ಕೆಸರುಚೆಲ್ಲಿ ಖುಷಿಪಡುವವ . ಬೊಗಳಪ್ಪ ಯಾವಾಗಲೂ ಕಾರಣವಿಲ್ಲದೆಯೋ, ಕಾರಣವಿದ್ದೋ ಬೊಗಳುತ್ತಲೇ ಇರುವವನು. ಮೆಲುಕಪ್ಪಎಂದೋ ತಿಂದದ್ದನ್ನು ಇಂದು ಕೂಡ ಮೆಲುಕು ಹಾಕುತ್ತಾ ಇರುವವನು. ಒಮ್ಮೆ ಮೊದಲಪ್ಪನಿಗೆ ಬಿತ್ತಲು ಯೋಗ್ಯವಾದ ಒಂದಷ್ಟುಗೋಧಿ ಸಿಕ್ಕಿತು. ಆತ ಇತರರಿಗೆ ಗೋಧಿಯನ್ನು ಬಿತ್ತಿ ಬೆಳೆ ತೆಗೆಯೋಣ ಎಂದಾಗ ಕೆಸರಪ್ಪ ತನ್ನ ಕೆಸರು ಗುಂಡಿಯಿಂದ ಹೊರಗೆಬರಲೇ ಇಲ್ಲ. ಬೊಗಳಪ್ಪ "ಉತ್ತು, ಬಿತ್ತು,ಬೆಳೆ ತೆಗೆಯಲು ನಾವೇನು ರೈತರೇ ?, ನಮಗೇನು ಬುದ್ಧಿ ಕೆಟ್ಟಿದೆಯೇ", ಎಂದುಕೂಗಾಡಿದ . ಮೆಲುಕಪ್ಪ "ನಾವು ಎಂದೂ ಬೆಳೆದವರಲ್ಲ ಹೀಗೆಯೇ ಬದುಕಿದ್ದೇವೆ . ಕಾಲ ಹಿಂದಿನಂತಿಲ್ಲ , ಮುಂದೆ ಹೇಗೋ ಏನೋ "ಎಂದು ನಿರಾಸಕ್ತಿ ತೋರಿಸಿದ. ಈ ಮಾತುಗಳನ್ನು ಕೇಳಿಯೂ ಉತ್ಸಾಹ ಕುಗ್ಗದ ಮೊದಲಪ್ಪ ಗೋಧಿಯನ್ನು ಬಿತ್ತಿಯೇಬಿಟ್ಟ. ಕೆಲವು ತಿಂಗಳುಗಳಲ್ಲಿ ಗೋಧಿ ಬೆಳೆ ಕೊಯ್ಲಿಗೆ ಬಂತು. ಮೊದಲಪ್ಪ ಇತರರನ್ನು ಕೊಯ್ಲಿಗೆ ಕರೆದ . ಯಾರೂ ಸಹಾಯಮಾಡಲಿಲ್ಲ. ಅದರ ಬದಲು , ನಿರುತ್ತೇಜಕ ಮಾತುಗಳನ್ನಾಡಿದರು . ಎದೆಗುಂದದ ಮೊದಲಪ್ಪ ಬೆಳೆಯನ್ನು ಕೊಯ್ದುಗೋಧಿಯನ್ನು ಸಂಗ್ರಹಿಸಿದ. ಯಾರದೋ ಸಹಾಯ ಪಡೆದು ಅದನ್ನು ಹಿಟ್ಟು ಮಾಡಿಸಿದ. ಗೋಧಿ ಹಿಟ್ಟಿನಿಂದ ರೊಟ್ಟಿ ತಟ್ಟಲು ತನ್ನಮೂವರು ಗೆಳೆಯರನ್ನು ಕರೆದ . ಎಲ್ಲರೂ ಮತ್ತದೇ ಮಾತುಗಳನ್ನಾಡಿದರು. ಛಲ ಬಿಡದ ಮೊದಲಪ್ಪ ತಾನೊಬ್ಬನೇ ಶ್ರಮವಹಿಸಿರೊಟ್ಟಿಗಳನ್ನು ಬೇಯಿಸಿದ. ಒಟ್ಟು ಹತ್ತು ರೊಟ್ಟಿಗಳು ಸಿದ್ದವಾದವು. ಅದನ್ನು ತಿನ್ನಲು ಮೊದಲಪ್ಪ ಕುಳಿತಾಗ , ಬೊಗಳಪ್ಪ ಬಂದುನೀನು ಸ್ವಾರ್ಥಿ ನೀನೊಬ್ಬನೇ ತಿನ್ನಲು ಕುಳಿತ್ತಿದ್ದೀಯ ನಮಗೇಕೆ ಕೊಡುತ್ತಿಲ್ಲ. ಎಂದು ಬೊಗಳಾಡಿದ. ಕೆಸರಪ್ಪನಂತು ನಿನ್ನ ರೊಟ್ಟಿನಮ್ಮ ಬಾಯಲ್ಲಿ ನೀರೂರಿಸುತ್ತಿದೆ . ನೀನೊಬ್ಬನೇ ತಿನ್ನುವುದು ಯಾವ ನ್ಯಾಯ ? ನಮಗೂ ಕೊಟ್ಟು ನೀನು ತಿನ್ನಬೇಕು ಎಂದುಕೂಗಾಡಿದ . ಮೆಲುಕಪ್ಪ ಹಿಂದಿನ ಕಾಲದಲ್ಲಿ ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು. ಈಗ ಕಾಲ ಕೆಟ್ಟಿದೆ . ರೊಟ್ಟಿಯನ್ನುನಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ನಾವು ಪ್ರತಿಭಟಿಸುತ್ತೇವೆ ಎಂದು ಕಿರುಚಿದ. ಕೂಗಾಟ , ಕಿರುಚಾಟ, ಎಳೆದಾಟ, ಹೊಡೆದಾಟಗಳ ಗಲಾಟೆಯನ್ನು ಕೇಳಿ ಹೊಲದ ಮಾಲೀಕ ಬಂದ . ನೆಲದ ರಾಜನೂ ಬಂದ . ರಾಜನೂ ಅಲ್ಲಿದ್ದ ಹತ್ತು ರೊಟ್ಟಿಗಳಲ್ಲಿ ಶೇಕಡನಲವತ್ತು ಅಂದರೆ ನಾಲ್ಕು ರೊಟ್ಟಿಗಳು ಸರ್ಕಾರದ ಸುಂಕವೆಂದು ಹೇಳಿ ಅಷ್ಟನ್ನು ಕಿತ್ತುಕೊಂಡು ಹೊರಟುಹೋದ. ಹೊಲದಮಾಲೀಕ ಈ ಬೆಳೆ ಬೆಳೆದ ಜಮೀನು ನನ್ನದು. ಅರ್ಧ ನನಗೆ ಸಲ್ಲಬೇಕು ಎಂದು ಹೇಳಿ ಉಳಿದಿದ್ದ ಆರು ರೊಟ್ಟಿಗಳಲ್ಲಿ ಮೂರನ್ನು ತೆಗೆದುಕೊಂಡು ಹೊರಟುಹೋದ. ಉಳಿದ ಮೂರು ರೊಟ್ಟಿಗಳನ್ನು ಕೆಸರಪ್ಪ, ಬೊಗಳಪ್ಪ ಮತ್ತು ಮೆಲುಕಪ್ಪ ತಲಾ ಒಂದರಂತೆಕಿತ್ತುಕೊಂಡು ತಿಂದರು. ಮೊದಲಪ್ಪನಿಗೆ ಏನೂ ಉಳಿಯಲಿಲ್ಲ. ಇದಾದ ನಂತರ ಮೊದಲಪ್ಪ ಎಂದೂ ಬೆಳೆ ಬೆಳೆಯಲು ಹೋಗಲೇ ಇಲ್ಲ. ತನ್ನ ಪಾಡಿಗೆ ತಾನು ಅಲ್ಲಿ ಇಲ್ಲಿ ಸಿಕ್ಕ ಕಾಳುಗಳನ್ನು ತಿಂದು ಬದುಕ ತೊಡಗಿದ.
ಸದಾ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದ ಮೊದಲಪ್ಪ ಹೀಗೆಕಾದ ಎಂಬುದು ಯಾರಿಗೂ ಅರ್ಥವಾಗಲಿಲ್ಲ . ನಿಮಗೇನಾದರೂಅರ್ಥವಾದರೆ ನಮಗೆ ಬರೆದು ತಿಳಿಸಿ.
ನಮ್ಮ ಗ್ರಾಮೀಣ ಪ್ರದೇಶದಲ್ಲಿಯೂ ಇಂಥ ಮನೆಮುರುಕರು ಇನ್ನೂ ಇದ್ದಾರೆ . ಸಮಾಜ ಅವರಿಗೂ ಮಣೆ ಹಾಕಿ ಕೂರಿಸುತ್ತಿದೆಎಂದರೆ ಪ್ರಾಮಾಣಿಕರೂ, ಮೊದಲಪ್ಪ ನಂತವರೂ ತಲೆ ತಗ್ಗಿಸಬೇಕಾದ ಸಂಗತಿ !. ಯಾವುದೇ ಕೆಲಸ ಮಾಡಲು ಮುಂದಾಳತ್ವವಹಿಸಿಕೊಂಡು ಹೋಗುವವರಿಗೆ ಕೇವಲ ಬೆಂಬಲ ವಾಗಿದ್ದರೆ ಸಾಕು . ಉಳಿದೆಲ್ಲ "ರಿಸ್ಕ್ " ಮೊದಲಪ್ಪ ನಂತಹ ಮೊದಲ ವ್ಯಕ್ತಿತೆಗೆದುಕೊಳ್ಳುತ್ತಾರೆ. ಒಂದು ಕುಟುಂಬ ವನ್ನಾಗಲಿ , ಒಂದು ಸಮಾಜವನ್ನಾಗಲೀ , ಒಂದು ರಾಷ್ಟ್ರವನ್ನಾಗಲಿ ಮುಂದೆ ಅಭಿವೃದ್ದಿಪಥದತ್ತ ತೆಗೆದುಕೊಂಡು ಹೋಗುತ್ತಾರೆ. ಎಲ್ಲಿ ದುಡಿಯುವ ಕೈಗೆ ಮರ್ಯಾದೆ ಸಿಗುವುದಿಲ್ಲವೋ ಅಲ್ಲಿ ವಿನಾಶ ವಿದ್ದದ್ದೆ. ಇದುನೂರಕ್ಕೆ ನೂರು ಸತ್ಯ. ಇನ್ನಾದರೂ ಮೊದಲಪ್ಪ ನಂತಹ ವ್ಯಕ್ತಿಗಳಿಗೆ ನಮ್ಮ ಸಮಾಜ ಸಹಾಯ ಮಾಡಬಲ್ಲದೆ ಕಾದುನೋಡೋಣ
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
!
ಸೋಮವಾರ, ಆಗಸ್ಟ್ 2, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ