ಏಕಾಗ್ರತೆಯಿಂದ ಅಧ್ಯಯನಕ್ಕೆ ಕುಳಿತ ಸಂದರ್ಭದಲ್ಲಿ ಯಾರಾದರೂ ಮನೆಮಂದಿ ಬಂದು ಯಾವುದೋ ಕೆಲಸಕ್ಕೆ ಕರೆಯಬಹುದು. ಆದ್ದರಿಂದ ಅವರಿಗೆ ಮೊದಲೇ ಹೇಳಿಟ್ಟಿರಬೇಕು. "ಒಂದು ಗಂಟೆಯ ಕಾಲ ಯಾರೂ ನನ್ನನ್ನು ಕರೆಯಬೇಡಿ "
ಎಂದು , ಏಕೆಂದರೆ , ಯಾರಾದರೂ ಬಂದು ಕರೆದಾರು ಎಂಬ ನಿರೀಕ್ಷೆ ಮನದಲ್ಲಿ ಕಿಂಚಿತ್ತು ಇದ್ದರೂ ಕೂಡ ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನು ಶಬ್ದ ಮಾಲಿನ್ಯದ ಸಮಸ್ಯೆಯೊಂದಿದೆ; ಹಳ್ಳಿಗಳೇ ಮೊದಲಾದ ಪ್ರಶಾಂತ ವಾತಾವರಣದಲ್ಲಿರುವ ವಿದ್ಯಾರ್ಥಿಗಳು ಈ ವಿಷಯದಲ್ಲಿ ಭಾಗ್ಯವಂತರು , ಆದರೆ ಪಟ್ಟಣಗಳಲ್ಲಿ , ಅದರಲ್ಲೂ ರಾಜಧಾನಿಗಳಲ್ಲಿ , ವಾಸವಾಗಿರುವ ವಿಧ್ಯಾರ್ಥಿಗಳು ಅನಾವಶ್ಯಕ ಗದ್ದಲಗಳೊಂದಿಗೆ ಗುದ್ದಾಡುತ್ತಿರಬೇಕಾಗುತ್ತದೆ. ಈ ಗದ್ದಲಗಳೆಲ್ಲ ನಗರಗಳಲ್ಲಿ ಅನಿವಾರ್ಯವಾದ್ದರಿಂದ ಅದಕ್ಕೆ ಹೊಂದಿಕೊಳ್ಳದೆ ಬೇರೆ ದಾರಿಯಿಲ್ಲ . ಆದರೆ ಎಷ್ಟು ಹೊಂದಿಕೊಳ್ಳಬೇಕೆಂದರೂ ಧ್ವನಿವರ್ಧಕಗಳು ಅರಚಾಡಲು ಆರಂಭಿಸಿದುವೆಂದರೆ , ಅಧ್ಯಯನವೆಲ್ಲ ಅಧ್ವಾನವಾಗಿಬಿಡುತ್ತದೆ.ವಿನಾಯಕ ಚೌತಿ ಬಂತೆಂದರೆ ಒಂದು ತಿಂಗಳು ಕರ್ಣಕರ್ಕಶ , ಕನ್ನಡ ರಾಜ್ಯೋತ್ಸವ ಬಂದಾಗ ಇನ್ನೊಂದು ತಿಂಗಳು ಗುಲ್ಲೋಗುಲ್ಲು . ಶ್ರೀರಾಮನವಮಿಯ ತಿಂಗಳಲ್ಲಂತೂ ವಿದ್ಯಾರ್ಥಿಗಳ ಪಾಡು ಅವರಿಗೆ ಗೊತ್ತು. ಇವೆಲ್ಲ ನಗರದ ಕೆಲವು ನರಕಸದೃಶ ಪರಿಸ್ಥಿತಿಗಳು ಸಮಾಜದ ವಿದ್ಯಾವಂತರು,ಶಿಕ್ಷಣತಜ್ಞರು ಈ ವಿಷಯದಲ್ಲಿ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುವುದು ಕಂಡುಬರುತ್ತದೆ. ಶಿಕ್ಷಣತಜ್ನರಿಗೆ ಅಧಿಕಾರಬಲವಿಲ್ಲವೆಂದು ತೋರುತ್ತದೆ.ಅಧಿಕಾರಬಲವಿರುವವರಿಗೆ ವಿವೆಕಪ್ರಜ್ನೆಯಿರುವಂತೆ ಕಾಣುತ್ತಿಲ್ಲ. ಇರಲಿ ವಿದ್ಯಾರ್ಥಿಗಳು ಧ್ವನಿಮಾಲಿನ್ಯದಿಂದ ಪಾರಾಗಲು ಒಂದೇ ಒಂದು ದಾರಿಯೆಂದರೆ ತಾವು ಅತ್ಯಂತ ಉನ್ನತ ಮಟ್ಟದ ವಿದ್ಯಾವಂತರಾಗಬೇಕೆನ್ನುವ ಹಂಬಲವನ್ನು ತೀವ್ರಗೊಳಿಸುವುದು .ಮನದಲ್ಲಿ ಹಂಬಲವಿದ್ದರೆ ಹೊರಗಣ ಯಾವ ಗದ್ದಲವೂ ಕೇಳಿಸುವುದೇ ಇಲ್ಲ .ಉದಾಹರಣೆಗೆ ತಲೆಯಲ್ಲಿ ಚಿಂತೆಯೊಂದು ತುಂಬಿಕೊಂಡಿದ್ದರೆ ಪಕ್ಕದಲ್ಲಿ ತಮ್ಮಟೆ ಬಾರಿಸುತ್ತಿದ್ದರೂ ಅದರ ಕಡೆಗೆ ನಮ್ಮ ಗಮನವಿರುವುದಿಲ್ಲ . ಪರೀಕ್ಷೆ ಸಮೀಪಿಸಿದಾಗ ಈ ಹಂಬಲ ಸಾಕಷ್ಟು ತೀವ್ರ ವಾಗುವುದುಂಟು . ಆದರೆ ಪರೀಕ್ಸೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವಾಗಲೇ ಆ ತೀವ್ರಹಂಬಲವಿದ್ದರೆ ಏಕಾಗ್ರತೆಯನ್ನು ಚೆನ್ನಾಗಿ ಬೆಳಸಿಕೊಳ್ಳಬಹುದು. ದಿಡೀರನೆ ಏಕಾಗ್ರತೆಯನ್ನು ಬರಿಸಿ ಕೊಳ್ಳುವುದು ಎಂಥವರಿಂದಲೂ ಸಾಧ್ಯವಿಲ್ಲ ಎಂಬ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು .ಸನ್ ನಾಚುರಲ್ ಫ್ಲಾಶ್ .ಕಂ /
+೯೧ -9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ