ಈ ಪ್ರಪಂಚದ ಎಲ್ಲ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು.
ಕಳೆದ ಶತಮಾನದಲ್ಲಿ ಉತ್ತರ ಭಾರತದಲ್ಲಿ ಸಾಧು ಸುಂದರ್ ಸಿಂಗ್ ಎಂಬ ಧರ್ಮ ಪ್ರಚಾರಕರಿದ್ದರು . ಅವರು ತಮ್ಮ ಅನುಭವಗಳನ್ನು "ವಿಸ್ದಂ ಆಪ್ಹ್ ಎ ಸಾಧು " ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಹಲವಾರು ಅರ್ಥ ಗರ್ಭಿತ ಹಾಗೂ ತತ್ತ್ವ ಭೋಧಕ ಪ್ರಸಂಗಗಳಿವೆ. ಅಂತಹ ಒಂದು ಪ್ರಸಂಗ ಇಲ್ಲಿದೆ .
ಒಮ್ಮೆ ಈ ಸಾಧುಗಳು ಟಿಬೇಟಿನ ಹಿಮಾಲಯದಲ್ಲಿ ಒಬ್ಬ ಮಾರ್ಗದರ್ಶಿಯೊಡನೆ ಸುತ್ತಾಡುತ್ತಿದ್ದರು. ಅದು ಚಳಿಗಾಲ ರಕ್ತ ಹೆಪ್ಪುಗಟ್ಟುವಷ್ಟು ಚಳಿಗಾಳಿ . ಅದರೊಂದಿಗೆ ಹಿಮಪಾತ. ತುಂಬ ಶ್ರಮದಾಯಕವಾದ ಪ್ರಯಾಣ. ಶ್ರಮವೆಂದು ಕೂರುವಂತಿಲ್ಲ.ಕೂತರೆ ಚಳಿಗೆ ಕೈಕಾಲುಗಳು ಮರಗಟ್ಟುತ್ತವೆ . ಸಂಜೆಯಾಗುವುದರೊಳಗೆ ಮುಂದಿನ ಹಳ್ಳಿಯನ್ನು ಸೇರಿಕೊಳ್ಳುವ ಅವಸರ. ಆಗ ಅವರಿಗೆ ರಸ್ತೆಯಲ್ಲಿ ಒಬ್ಬ ಪ್ರಜ್ಞಾಹೀನ ಮನುಷ್ಯ ಕಂಡ. ಚಳಿಯ ಆಘಾತಕ್ಕೊಳಗಾಗಿದ್ದ. ಕುಟುಕು ಜೀವ ಇದ್ದಂತಿತ್ತು. ಉಸಿರಾಟ ನಿಧಾನವಾಗಿ ನಡೆಯುತ್ತಿತ್ತು. ಅವನನ್ನು ಆ ದು:ಸ್ಥಿತಿಯಲ್ಲೇ ಬಿಟ್ಟು ಹೋಗಲು ಸಾಧುಗಳಿಗೆ ಮನಸ್ಸು ಬರಲಿಲ್ಲ. ಅಲ್ಲಿಯೇ ನಿಂತರು. ಆತನ ಪಾದಗಳನ್ನು ಗಸಗಸನೆ ಉಜ್ಜಿ , ಶಾಖ ಬರುವಂತೆ ಮಾಡಲು ಪ್ರಾರಂಭಿಸಿದರು. ಅವರ ಜೊತೆಗಿದ್ದ ಸಂಗಾತಿ "ಈತನ ಕತೆ ಮುಗಿದಂತಿದೆ, ಏನು ಮಾಡಿದರೂ ಮತ್ತೆ ಚೇತರಿಸಿಕೊಳ್ಳುವುದಿಲ್ಲ .ಇಲ್ಲಿಯೇ ನಿಂತರೆ ನಾವೂ ತೊಂದರೆಗೆ ಸಿಕ್ಕಿಕೊಳ್ಳುತ್ತೇವೆ. ನಮ್ಮ ಸಾವನ್ನು ನಾವೇ ಆಹ್ವಾನಿಸಿದಂತಾಗುತ್ತದೆ. ಬೇಗ ಎದ್ದು ಹೊರಡಿ. ಸಂಜೆಗೆ ಮುಂಚೆ ಹತ್ತಿರದ ಯಾವುದಾದರೂ ಹಳ್ಳಿಯನ್ನು ಸೇರಿಕೊಳ್ಳೋಣ."ಎಂದು ಅವಸರಿಸಿದ. ಒಬ್ಬ ಮನುಷ್ಯನನ್ನು ಸಾವಿಗೊಪ್ಪಿಸಿ ಹೋಗಲು ಸಾಧುಗಳು ಸಿದ್ಧರಿರಲಿಲ್ಲ. ಮಾರ್ಗದರ್ಶಿಯ ಮಾತುಗಳಿಗೆ ಗಮನಕೊಡದೆ ತಮ್ಮ ಶುಶ್ರೂಷೆ ಮುಂದುವರೆಸಿದರು. ಮಾರ್ಗದರ್ಶಿ ಇವರಿಗೆ ಕಾಯದೆ ತನ್ನು ಪಾಡಿಗೆ ತಾನು ಹೊರಟುಹೋದ . ಸಾಧುಗಳು ಅರ್ಧ ಗಂಟೆಯ ಕಾಲ ಅಪರಿಚಿತನ ಪಾದಗಳನ್ನು ರಭಸದಿಂದ ಉಜ್ಜುತ್ತಲೇ ಹೋದರು. ಆತನಲ್ಲಿ ಸ್ಪಲ್ಪ ಚಲನವಲನ ಕಾಣಿಸಿಕೊಂಡಿತು. ತಕ್ಷಣ ಸಾಧುಗಳು ಆತನನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡರು. ಹತ್ತಿರದ ಹಳ್ಳಿಯ ಕಡೆಗೆ ಧಾಪುಗಾಲು ಹಾಕಲು ಆರಂಭಿಸಿದರು. ಈ ನಡಿಗೆಯಿಂದಾಗಿ ಅವರ ಮೈಯಲ್ಲೂ ಶಾಖ ಉತ್ಪಾದನೆಯಾಯಿತು . ಅವರ ಹೆಗಲ ಮೇಲೆ ಇದ್ದ ಮನುಷ್ಯನ ದೇಹದಲ್ಲೂ ಶಾಖ ಉತ್ಪಾದನೆಯಾಯಿತು. ನಿಧಾನವಾಗಿ ಪ್ರಜ್ಞೆ ಮರಳಿ ಬಂದಿತು. ಸ್ವಲ್ಪ ಹೊತ್ತಿಗೆ ಆತ ಮಾತನಾಡತೊಡಗಿದ. ತನ್ನನ್ನು ಕೆಳಗಿಳಿಸಿ ಎಂದ . ಆತ ಕೆಳಗಿಳಿದ ನಂತರ ಇಬ್ಬರೂ ಭರಭರನೆ ನಡೆಯಹತ್ತಿದರು. ಆ ವೇಗದ ನಡಿಗೆಯಿಂದ ಇಬ್ಬರ ದೇಹದಲ್ಲೋ ಚೈತನ್ಯ ತುಂಬಿಕೊಂಡಿತು.
ಒಂದೆರಡು ಮೈಲಿ ನಡೆಯುವಷ್ಟರಲ್ಲಿ ರಸ್ತೆಯಲ್ಲಿ ಮತ್ತೊಂದು ದೇಹ ಬಿದ್ದಿರುವುದು ಕಂಡಿತು. ನಡಿಗೆಯನ್ನು ನಿಲ್ಲಿಸಿ ಬಗ್ಗಿ ನೋಡಿದರೆ ಅಲ್ಲಿ ಬಿದ್ದಿದ್ದ ದೇಹ ಅವರ ಮಾರ್ಗದರ್ಶಿಯದಾಗಿತ್ತು. ಬಹುಶ : ಒಬ್ಬನೇ ನಡೆಯುತ್ತಾ ಚಳಿಯ ಹೊಡೆತಕ್ಕೆ ಕುಸಿದು ಬಿದ್ದಿರಬಹುದಾದ, ಹಿಮಪಾತಕ್ಕೆ ಸಿಕ್ಕಿ ದೇಹ ಮರಗಟ್ಟಿ ಹೋಗಿರಬಹುದಾದ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು . ಆ ಮಾರ್ಗದರ್ಶಿಯ ದುರಂತವನ್ನು ಕಂಡು ಒಂದೆರಡು ನಿಮಿಷ ಶೋಕಿಸಿದ ಸಾಧು ಮತ್ತು ಆ ಮನುಷ್ಯ ಪ್ರಯಾಣ ಮುಂದುವರೆಸಿದರು. ಮುಂದಿನ ಹಳ್ಳಿಗೆ ಸುರಕ್ಷಿತವಾಗಿ ತಲುಪಿದರು.
ಕಷ್ಟದಲ್ಲಿರುವವರಿಗೆ ನಮ್ಮ ಕಷ್ಟ ಲೆಕ್ಕಿಸದೇ ಅಷ್ಟೋ ಇಷ್ಟೋ ಸಹಾಯ ಮಾಡಿದರೆ ನಮ್ಮ ಕಷ್ಟ ಕರಗಿಹೊಗದಿರಬಹುದು . ಆದರೆಕಷ್ಟವನ್ನೆದುರಿಸಿ ನಡೆಯುವ ಚೈತನ್ಯ ನಮಗೆ ದೊರೆಯಬಹುದು.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ನೆಟ್ ನಾಗ
ಎ.ಟಿ.ನಾಗರಾಜ
ದಬ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-೯೬೩೨೧೭೨೪೮೬
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ